ಖರಾಸುರನು ಹಿಮಾಲಯದಲ್ಲಿ ತಪಸ್ಸು ಮಾಡಿ ಶಿವನನ್ನು ಒಲಿಸಿಕೊಂಡನಂತೆ. ಲೋಕದಲ್ಲಿ ನಿತ್ಯವೂ ಶಿವಾರಾಧನೆ ನಡೆಯುವಂತಿರಲಿ ಎಂದು ವರ ಕೇಳಿದನಂತೆ. ಅದಕ್ಕೊಪ್ಪಿದ ಶಿವ ಮೂರು ಶಿವಲಿಂಗಗಳನ್ನು ಆತನಿಗೆ ನೀಡಿ ಗುಹಾ ಮಾರ್ಗದಲ್ಲಿ ನಿನ್ನೂರಿಗೆ ಹೋಗು. ಮಧ್ಯದಲ್ಲಿ ಎಲ್ಲೂ ತಲೆ ಎತ್ತಿ ನೋಡಬೇಡ. ನೋಡಿದರೆ ಅಲ್ಲಿ ಈ ಲಿಂಗಗಳು ನೆಲೆಯಾಗುತ್ತವೆ ಎಂದು ವರ ನೀಡಿದ. ಖರನು ಒಂದು ಶಿವಲಿಂಗವನ್ನು ಎಡಗೈಯಲ್ಲಿ, ಇನ್ನೊಂದನ್ನು ಬಲಗೈಯಲ್ಲಿ, ಮೂರನೆಯದನ್ನು ಬಾಯಲ್ಲಿ ಇರಿಸಿಕೊಂಡು ಕಾಶಿಯಿಂದ ಗುಹಾ ಮಾರ್ಗದಲ್ಲಿ ಸಾಗುತ್ತಾನೆ. ದಕ್ಷಿಣ ಭಾರತ ತಲುಪಿದಾಗ ಆತನಿಗೆ ತನ್ನೂರು ತಲುಪಿದ ಭಾವನೆ ಉಂಟಾಗಿ ಶಿವಧ್ಯಾನದಿಂದ ವಿಮುಖನಾಗಿ ಮೇಲೆ ನೋಡುತ್ತಾನೆ. ಇದ್ದಕ್ಕಿದ್ದಂತೆ ಶಿವಲಿಂಗದ ಭಾರ ಹೆಚ್ಚಾಗಿ ಆತನ ಹಿಡಿತದಿಂದ ಜಾರುತ್ತದೆ. ಆಗ ಕೇಳಿ ಬಂದ ಅಶರೀರವಾಣಿಯ ಪ್ರಕಾರ ಶಿವಗಣನಾದ ಗುಳಿಗನು ಶಂಖಪಾಲನ ರೂಪದಲ್ಲಿ ಮಾರ್ಗ ತೋರುತ್ತಾನೆ. ಖರನು ಎಡಗೈ ಲಿಂಗವನ್ನು ಬೆಟ್ಟಂಪಾಡಿಯಲ್ಲಿ, ಬಲಗೈ ಲಿಂಗವನ್ನು ಆಲಂಕೂಡ್ಲುವಿನಲ್ಲಿ ಪ್ರತಿಷ್ಠಾಪಿಸುತ್ತಾನೆ. ಬಾಯೊಳಗಿದ್ದ ಶಿವಲಿಂಗವೂ ಮಾಯವಾದ ಸ್ಥಳದಿಂದ ಒಂದು ಹರದಾರಿಯಷ್ಟು ಪೂರ್ವ ಬಯಲಿನ ಮಧ್ಯೆ ಪ್ರತ್ಯಕ್ಷ ವಾಗುತ್ತದೆ. ಆ ಸ್ಥಳವೇ ನೆಟ್ಟಣಿಗೆ ಶ್ರೀ ಮಹಾಲಿಂಗೇಶ್ವರ ಕ್ಷೇತ್ರ. ಕಾಶಿಯಿಂದ ಹೊರಟ ಖರನು ಗವಿಯಿಂದ ಹೊರಗೆ ಬಂದ ಸ್ಥಳವೇ ಚೆಂಡೆತ್ತಡ್ಕದ ಜಾಂಬ್ರಿ ಗುಹೆ ಇರುವ ಸ್ಥಳ.