ನವದುರ್ಗಗಳಲ್ಲಿ ಒಂದೆನಿಸಿರುವ ಹುತ್ರಿದುರ್ಗವು ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದ ಸುಮಾರು 65 ಕಿ.ಮಿ. ದೂರದಲ್ಲಿದೆ. ಕುಣಿಗಲ್ನಿಂದ ಆಗ್ನೇಯ ದಿಕ್ಕಿಗೆ 16 ಕಿ.ಮೀ. ದೂರವಿರುವ ಹುತ್ರಿದುರ್ಗವು ಮಾಗಡಿಯ ವಾಯುವ್ಯ ದಿಕ್ಕಿಗೆ ಸರಿಸುಮಾರು ಅಷ್ಟೇ ದೂರದಲ್ಲಿದೆ. ಇದು ತುಮಕೂರು ಜಿಲ್ಲೆಯಲ್ಲಿದೆ. ಮಾಗಡಿ-ಕುಣಿಗಲ್ ರಾಜ್ಯ ಹೆದ್ದಾರಿ-೯೪ ರಿಂದ ಸುಮಾರು ೭ ಕಿ.ಮಿ. ದೂರದಲ್ಲಿದೆ. ಸಮುದ್ರ ಮಟ್ಟದಿಂದ ಸುಮಾರು ೩೭೧೩ ಅಡಿಗಳ ಎತ್ತರದಲ್ಲಿರುವ ಹುತ್ರಿದುರ್ಗದಲ್ಲಿರುವ ದೊಡ್ಡಬೆಟ್ಟದ ಮೇಲೆ ಹಳೆಯ ಕೋಟೆ ಮತ್ತು ದೇವಸ್ಥಾನವಿದೆ. ಬೆಟ್ಟದ ಬುಡದಲ್ಲಿ ಅದೇ ಹೆಸರಿನ ಹಳ್ಳಿಯೂ ಇದೆ. ವಿಜಯನಗರದ ಅರಸರ ಸಾಮಂತರಾಗಿದ್ದ ಕೆಂಪೇಗೌಡರ ಕಾಲದಲ್ಲಿ (ಕ್ರಿ.ಶ. 1534) ನಿರ್ಮಿಸಿದ ಕೋಟೆಯಿಂದಾಗಿ ಮತ್ತು 3ನೇ ಆಂಗ್ಲೋ ಮೈಸೂರು ಯುದ್ದದಿಂದಾಗಿ ಹುತ್ರಿದುರ್ಗವು ಐತಿಹಾಸಿಕವಾಗಿ ಮಹತ್ವ ಹೊಂದಿದೆ. ಹುತ್ರಿದುರ್ಗ ಹಳ್ಳಿಯನ್ನು ಸುತ್ತುವರೆದ ಎರಡು ಬೆಟ್ಟದತುದಿಗಳ ಮೇಲೆ ಈ ಕೋಟೆಯನ್ನು ಕಾಣಬಹುದು. ಇದು ಒಂದು ಏಳು ಸುತ್ತಿನ ಕೋಟೆಯಾಗಿತ್ತು. ಈಗ ಕೋಟೆ ಶಿಥಿಲಾವಸ್ಥೆಯಲ್ಲಿದೆ. ಬೆಟ್ಟದ ಮೇಲುಗಡೆ ಶಿವ ಮತ್ತು ನಂದಿ ಗುಡಿಯಿದೆ. ಪ್ರತಿ ಸೋಮವಾರ ಮತ್ತು ಶುಕ್ರವಾರದಂದು ಪೂಜೆ ಸಲ್ಲಿಸಲಾಗುತ್ತದೆ.
http://kn.wikipedia.org/wiki/%E0%B2%B9%E0%B3%81%E0%B2%A4%E0%B3%8D%E0%B2%B0%E0%B2%BF%E0%B2%A6%E0%B3%81%E0%B2%B0%E0%B3%8D%E0%B2%97