ಬೆಂಗಳೂರಿನಲ್ಲಿ ನಾಡು-ನುಡಿ-ಕಲಿಕೆ-ಅರಿಮೆಯ ಸುತ್ತ ಚಿಂತನೆಗೆ ಹಚ್ಚುವ ಪುಸ್ತಕಗಳಿಗೆ ಮೀಸಲಾದ ಏಕೈಕ ಪುಸ್ತಕ ಮಳಿಗೆ ಮುನ್ನೋಟ ಪುಸ್ತಕ ಮಳಿಗೆ..
ಕನ್ನಡ ಪುಸ್ತಕಗಳಿಗೆ ಹಲವಾರು ಅಂಗಡಿಗಳಿವೆ. ಆದರೆ ಬಹುತೇಕ ಅಂಗಡಿಗಳಲ್ಲಿ ಕಥೆ, ಕಾದಂಬರಿ, ವಿಮರ್ಶೆ, ಕಾವ್ಯ ಮುಂತಾದ ಪ್ರಕಾರಗಳ ಸಾಹಿತ್ಯವೇ ಹೆಚ್ಚು ದೊರೆಯುತ್ತದೆ. ಆದರೆ ಕನ್ನಡ ನಾಡು ನುಡಿ, ಅದರ ಇತಿಹಾಸ, ಪರಂಪರೆ, ಗಡಿ, ನೆಲ, ಜಲ ಸೇರಿದಂತೆ ಇಂದಿನ ಸವಾಲುಗಳು, ಅದರ ಸುತ್ತಲಿನ ಅಂಕಿಅಂಶಗಳು, ತಾಯ್ನುಡಿಯಲ್ಲಿ ಕಲಿಕೆಯ ಸವಾಲುಗಳು, ಕನ್ನಡದ ಭಾಷಾ ವಿಜ್ಞಾನದಲ್ಲಿ ಆಗುತ್ತಿರುವ ಹೊಸ ಚರ್ಚೆಗಳು, ಭಾರತದ ಒಕ್ಕೂಟ ವ್ಯವಸ್ಥೆ, ಅಧಿಕಾರ ವಿಕೇಂದ್ರಿಕರಣ ಮುಂತಾದ ಗಹನವಾದ, ನಾಡಿನ ಭವಿಷ್ಯದ ದೃಷ್ಟಿಯಿಂದ ಮಹತ್ವವೂ ಆದ ವಿಚಾರಗಳ ಕುರಿತಂತೆ ಮೌಲಿಕವೂ, ಮಾಹಿತಿಪೂರ್ಣವೂ ಹೊತ್ತಗೆಗಳು ಹೆಚ್ಚು ಕಾಣಿಸುವುದಿಲ್ಲ, ಇಲ್ಲವೇ ಎಲ್ಲೆಲ್ಲೋಚೆದುರಿದಂತೆ ಹರಡಿಕೊಂಡಿರುತ್ತವೆ. ಇಂತಹ ಮುಖ್ಯವಾದ ಪುಸ್ತಕಗಳೆಲ್ಲವನ್ನೂ ಒಂದೇ ವೇದಿಕೆಯಲ್ಲಿ ದೊರೆಯುವಂತೆ ಮಾಡುವ ಉದ್ದೇಶದೊಂದಿಗೆ ಕಳೆದ ವರ್ಷ ನವೆಂಬರ್ ಒಂದರಂದು ಮುನ್ನೋಟ ಪುಸ್ತಕ ಮಳಿಗೆ ಶುರುವಾಗಿದೆ. ಜನಪ್ರಿಯ ಪ್ರಕಾಶಕರಷ್ಟೇ ಅಲ್ಲದೇ ಕನ್ನಡ ಸಾಹಿತ್ಯ ಪರಿಷತ್, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಸಾಹಿತ್ಯ ಅಕಾಡೆಮಿಯಂತಹ ಸಂಸ್ಥೆಗಳು ಪ್ರಕಟಿಸಿರುವ ಹಲವಾರು ಪುಸ್ತಕಗಳನ್ನೂ ಮುನ್ನೋಟದಲ್ಲಿ ಕಾಣಬಹುದು. ಮಳಿಗೆಯಲ್ಲಿನ ಇಂತಹ ಚಿಂತನೆಗೊಡ್ಡುವ ಪುಸ್ತಕಗಳ ಜೊತೆಯಲ್ಲಿ “ಮಾತುಕತೆ@ಮುನ್ನೋಟ” ಅನ್ನುವ ಹೆಸರಿನ ಉಪನ್ಯಾಸ ಕಾರ್ಯಕ್ರಮ ತಿಂಗಳಿಗೆ ಒಂದು ಇಲ್ಲವೇ ಎರಡು ಭಾನುವಾರ ನಡೆಯುತ್ತ ಬಂದಿದ್ದು, ಅಂಗಡಿ ಶುರುವಾದ ಹತ್ತು ತಿಂಗಳಲ್ಲಿ 24 ಮಾತುಕತೆಗಳನ್ನು ಸಮಾಜದ ಅನೇಕ ಯುವ ಮತ್ತು ಹಿರಿಯ ಚಿಂತಕರು ನಡೆಸಿಕೊಟ್ಟಿದ್ದಾರೆ. ಬೆಂಗಳೂರಿನ ಬಡಾವಣೆಗಳ ಇತಿಹಾಸ, ಆಲೂರು ವೆಂಕಟರಾಯರು, ನಲ್ವಡಿ ಕೃಷ್ಣರಾಜ್ ಒಡೆಯರ್ ಅವರ ಬದುಕು ಮತ್ತು ಸಾಧನೆ, ಕನ್ನಡಿಗರೇಕೆ ಉದ್ಯಮಿಗಳಾಗಿಲ್ಲ, ಕರ್ನಾಟಕದ ನೀರಾವರಿ ಯೋಜನೆಗಳ ಪರಿಚಯ, ಕರ್ನಾಟಕದ ಶಿಕ್ಷಣ ವ್ಯವಸ್ಥೆಯ ಪರಿಚಯ, ಕಾಲೂರು ಚೆಲುವೆಯಂತಹ ಅಚ್ಚಗನ್ನಡದ ಕಾವ್ಯದ ಪರಿಚಯ ಹೀಗೆ ವೈವಿಧ್ಯತೆ ಇಲ್ಲಿನ ಕಾರ್ಯಕ್ರಮಗಳಲ್ಲಿವೆ. ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವವರು ಯುವಕರೇ ಅನ್ನುವುದು ಮುನ್ನೋಟದ ಇನ್ನೊಂದು ಹೆಗ್ಗಳಿಕೆ. ಇದಲ್ಲದೇ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಓದುವ ಮಕ್ಕಳನ್ನು ಗುರಿಯಾಗಿಸಿಕೊಂಡು, ಕನ್ನಡದಲ್ಲೇ ಸೈನ್ಸ್ ಮತ್ತು ಟೆಕ್ನಾಲಜಿಯ ವಿಷಯಗಳನ್ನು, ಹೊಸ ಬದಲಾವಣೆಗಳನ್ನು ಚರ್ಚಿಸುವ “ಅರಿಮೆ@ಮುನ್ನೋಟ” ಅನ್ನುವ ಕಾರ್ಯಕ್ರಮವನ್ನು ತಿಂಗಳಿಗೆ ಒಂದರಂತೆ ಅಂಗಡಿಯಲ್ಲಿ ನಡೆಸಿಕೊಂಡು ಬರಲಾಗುತ್ತಿದೆ. ಕನ್ನಡದಲ್ಲೇ ವಿಜ್ಞಾನದ ತಿಳಿವು ಹಂಚುವ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರಲ್ಲದೇ ಕನ್ನಡದಲ್ಲಿ ವಿಜ್ಞಾನ ಸಾಹಿತ್ಯ ತರುವ ಆಸಕ್ತಿಯುಳ್ಳವರು ಪಾಲ್ಗೊಳ್ಳುತ್ತಿದ್ದಾರೆ. ಈಗಾಗಲೇ ಐದು ತಿಂಗಳಿನಲ್ಲಿ ಐದು ಅರಿಮೆ ಮಾತುಕತೆ ಕಾರ್ಯಕ್ರಮಗಳು ಮುನ್ನೋಟದಲ್ಲಿ ನಡೆದಿದೆ.
ಐವತ್ತು ಪುಸ್ತಕಗಳೊಂದಿಗೆ ಶುರುವಾದ ಮುನ್ನೋಟದ ಪಯಣ ಈಗ 140 ಪುಸ್ತಕಗಳಿಗೆ ಬಂದಿದೆ. ನಿಯಮಿತವಾಗಿ ಮುನ್ನೋಟದ ಆಶಯಗಳಿಗೆ ಪೂರಕವಾದ ಹೊಸ ಹೊಸ ಹೊತ್ತಗೆಗಳನ್ನು ಸೇರಿಸುತ್ತ ಬಂದಿದ್ದೇವೆ. ಇತರೆಡೆ ಇರುವಂತೆ ಪುಸ್ತಕಗಳನ್ನು ಒಂದರ ಮೇಲೊಂದರಂತೆ ಪೇರಿಸಿದೇ ಪ್ರತಿಯೊಂದು ಪುಸ್ತಕವೂ ನೋಡಲು ದೊರೆಯುವಂತೆ ನಮ್ಮ ಪ್ರದರ್ಶನದ ಏರ್ಪಾಟಿದೆ. ಕನ್ನಡ ಪುಸ್ತಕಗಳ ಅಂಗಡಿಗೆ ಒಂದಿಷ್ಟು ಆಧುನಿಕತೆಯ ಸ್ಪರ್ಷ ಕೊಟ್ಟು ಒಂದೊಳ್ಳೆ ಅನುಭವ ಕೊಡುವ ಪ್ರಯತ್ನ ಮಾಡಿದ್ದೇವೆ.
ಇದರೊಂದಿಗೆ ಪರಭಾಷಿಕರಿಗೆ ಕನ್ನಡ ಕಲಿಸುವ ಯೋಜನೆ, ಕನ್ನಡ ಶಾಲೆಗಳಿಗೆ ಒಳ್ಳೆಯ ಗುಣಮಟ್ಟದ ವಿಜ್ಞಾನ ಪುಸ್ತಕಗಳನ್ನು ಆಸಕ್ತರ ನೆರವಿನೊಂದಿಗೆ ನೀಡುವ ಯೋಜನೆಯನ್ನೂ ಮುನ್ನೋಟ ನಡೆಸುತ್ತಿದೆ. ಮುನ್ನೋಟದಲ್ಲಿನ ಎಲ್ಲ ಪುಸ್ತಕಗಳನ್ನೂ ಆನ್ ಲೈನ್ ತಾಣದ ಮೂಲಕ ಭಾರತದೆಲ್ಲೆಡೆಯಿಂದ ಕೊಂಡುಕೊಳ್ಳುವ ವ್ಯವಸ್ಥೆಯನ್ನೂ ಕಲ್ಪಿಸಿದ್ದೇವೆ. ಮುನ್ನೋಟ ಸಂಸ್ಥೆಯನ್ನು ವಸಂತ ಶೆಟ್ಟಿ ಮತ್ತು ಗೆಳೆಯರು ಉತ್ಸಾಹದಿಂದ ನಡೆಸಿಕೊಂಡು ಬರುತ್ತಿದ್ದಾರೆ.
ಇದೊಂದು ದೊಡ್ಡ ಪಯಣದ ಮೊದಲ ಹೆಜ್ಜೆ. ನಿಮ್ಮ ಬೆಂಬಲವಿರಲಿ..
ಮುನ್ನೋಟದ ಫೇಸ್ ಬುಕ್ ಪುಟ:
www.facebook.com/munnota
ಮುನ್ನೋಟದ ಟ್ವಿಟರ್ ಖಾತೆ:
https://twitter.com/munnotaweb
ಮುನ್ನೋಟ ತಾಣ :
www.munnota.com
ನಮ್ಮ ವಿಳಾಸ:
ಮುನ್ನೋಟ
ನಂಬರ್ 67, ಸೌತ್ ಅವೆನ್ಯೂ ಕಾಂಪ್ಲೆಕ್ಸ್
ಡಿವಿಜಿ ರಸ್ತೆ, ನಾಗಸಂದ್ರ ಸರ್ಕಲ್ ಬಳಿ
ಬಸವನಗುಡಿ, ಬೆಂಗಳೂರು - 560004
ಫೋನ್: 080 2660 3000
ಗೂಗಲ್ ಮ್ಯಾಪ್ :
https://goo.gl/maps/Kg3LZ3rMxJN2