ನಾಡಿಗೇ ಮಾದರಿ ಶ್ರೀ ಭಾರತಿ ಹಿರಿಯ ಪ್ರಾಥಮಿಕ ಶಾಲೆ
ಮಾನಸಿಕವಾಗಿ ಸಬಲಗೊಳಿಸುವ, ಚರಿತ್ರೆಯನ್ನು ನಿರ್ಮಿಸುವ, ಬುದ್ಧಿಯನ್ನು ವಿಕಸಿತಗೊಳಿಸುವ ಹಾಗೂ ವ್ಯಕ್ತಿಯನ್ನು ಸ್ವಾವಲಂಬಿಗೊಳಿಸುವ ಶಿಕ್ಷಣವೇ ನಿಜವಾದ ಶಿಕ್ಷಣ
- ಸ್ವಾಮಿ ವಿವೇಕಾನಂದ
ಶ್ರೀ ಭಾರತಿ ಹಿರಿಯ ಪ್ರಾಥಮಿಕ ಶಾಲೆ ಆರಂಭವಾದುದು ಕೇವಲ ಆಲಂಕಾರು ಸುತ್ತಮುತ್ತಲೆಲ್ಲೂ ಶಾಲೆಗಳಿರವೆಂದಲ್ಲ. ಬದಲಾಗಿ, ಅಲ್ಲಿರುವ ಸರಕಾರೀ ಶಾಲೆಗಳಿಗೆ ತನ್ನದೇ ಆದ ಇತಿಮಿತಿಗಳಿರುತ್ತವೆ, ಕಟ್ಟುಪಾಡುಗಳಿರುತ್ತವೆ. ಇಂತಹ ಶಿಕ್ಷಣ ಮಕ್ಕಳನ್ನು ಬುದ್ಧಿವಂತರನ್ನಾಗಿಸುತ್ತದೆಯೇ ಹೊರತು ಪ್ರಜ್ಞಾವಂತ ನಾಗರಿಕರನ್ನಾಗಿಸುವುದಿಲ್ಲ ಎಂಬುದನ್ನು ಅರಿತು, ಮೆಕಾಲೆ ಪದ್ಧತಿಯ ಶಿಕ್ಷಣದ ಬದಲಾಗಿ, ಮಕ್ಕಳಿಗೆ ತಮ್ಮ ಮುಂದಿನ ಬದುಕಿಗೆ ಬೇಕಾದ ನಡವಳಿಕೆಗೆ ಬೇಕಾದ ನಡವಳಿಕೆಗಳು ತಿಳುವಳಿಕೆಗಳನ್ನು ನೀಡುವ ಸದುದ್ದೇಶದಿಂದ 1994 ರಲ್ಲಿ ಆರಂಭವಾಯಿತು. ನಮ್ಮ ಪ್ರಾಚೀನ ಪದ್ಧತಿಯ ಗುರುಕುಲ ಪದ್ಧತಿಯ ಶಿಕ್ಷಣ, ಮಾತೃಭಾಷಾ ಮಾಧ್ಯಮದಲ್ಲಿ ಅತೀ ಕಡಿಮೆ ವೆಚ್ಚದಲ್ಲಿ ಹಾಗೂ ಮುಂದಿನ ಉನ್ನತ ವಿದ್ಯಾಭ್ಯಾಸವನ್ನು ಉಚಿತವಾಗಿ ನೀಡುವ ಉದ್ದೇಶವನ್ನು ಇಟ್ಟುಕೊಂಡಿದೆ ಈ ಭಾರತೀ ವಿದ್ಯಾಸಂಸ್ಥೆ.
ಸಂಸ್ಕೃತಿ ನಡವಳಿಕೆ
ವಿದ್ಯಾ ದಧಾತಿ ವಿನಯಂ ಎಂಬಂತೆ ಗುರುಹಿರಿಯರಿಗೆ ವಿಧೇಯರಾಗಿರುವುದು, ದೇವರಲ್ಲಿ ಭಕ್ತಿ, ಗೌರವವನ್ನು ಕಾಣುವುದು ಮೊದಲಾದ ನಮ್ಮ ಸಂಸ್ಕೃತಿಯನ್ನು ಪ್ರಾಥಮಿಕ ಹಂತದಲ್ಲೇ ತಿಳಿಹೇಳಲಾಗುತ್ತದೆ. ಮೊದಲು ಇದನ್ನೇ ಕಲಿಕೆ ಎಂದು ತಿಳಿಯುವ ಮಕ್ಕಳು, ಮುಂದಕ್ಕೆ ಅದನ್ನೇ ರಕ್ತಗತವಾಗಿಸಿಕೊಳ್ಳುತ್ತಾರೆ.
ಅಖಿಲ ಭಾರತ ವ್ಯಾಪ್ತಿಯಲ್ಲಿರುವ ‘ವಿದ್ಯಾ ಭಾರತಿ’ ಸಂಘಟನೆ ನಮಗೆ ಮಾರ್ಗದರ್ಶನ ನೀಡುತ್ತಿದೆ. ನಮ್ಮ ಶಾಲೆಯಲ್ಲಿ ಪಂಚಮುಖಿ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತದೆ, ಅಂದರೆ,
ಯೋಗ
ಸಂಸ್ಕೃತ
ಸಂಗೀತ
ಇತರ ಕಲೆಗಳು
ಶಾರೀರಿಕ, ಮೌಲ್ಯ ಶಿಕ್ಷಣ
ಹೀಗೆ ಎಲ್ಲಾ ಚಟುವಟಿಕೆಗಳು ಪಂಚಮುಖಿ ಶಿಕ್ಷಣದ ವಿಭಾಗದಲ್ಲಿ ನಡೆಯುತ್ತವೆ. ಮಕ್ಕಳು ಆಟ ಪಾಠ ಎನ್ನುತ್ತಲೇ ತಮಗರಿವಿಲ್ಲದಂತೆಯೇ ಹಲವಾರು ವಿಷಯಗಳನ್ನು ಕಲಿಯುತ್ತಾರೆ. ವಾತಾವರಣವೇ ಕಲಿಕೆಗೆ ಮೂಲ ಎನ್ನುವಂತೆ ಉತ್ತಮ ವಾತಾವರಣ ಅವರ ಕಲಿಕೆಗೆ ಪ್ರೇರಣೆ ನೀಡುತ್ತದೆ. ಗೋಡೆಯ ಮೇಲಿರುವ ಮಹಾ ಪುರುಷರ ಚಿತ್ರಪಟಗಳು ಮಕ್ಕಳ ಬದುಕಿನ ಆದರ್ಶಪ್ರಾಯವಾಗುತ್ತವೆ. ವಿದ್ಯಾರ್ಥಿಗಳಿಗೆ ತಮ್ಮ ಕಲಿಕಾವಧಿಯಲ್ಲಿ ಇವೆಲ್ಲದರ ಪರಿಚಯ ಮಾಡಿಕೊಡಲಾಗುತ್ತದೆ.