ಪವಿತ್ರ ನದಿಗಳಾದ ನೇತ್ರಾವತಿ, ಕುಮಾರಧಾರಾ ಸಂಗಮ ತೀರದಲ್ಲಿ ನೆಲೆಸಿರುವ ಶ್ರೀ ಸಹಸ್ರಲಿಂಗೇಶ್ವರ ಕ್ಷೇತ್ರವು ಪ್ರಾಚೀನ ತೀರ್ಥಕ್ಷೇತ್ರಗಳಲ್ಲಿ ಒಂದಾಗಿದೆ. ಚಾರಿತ್ರಿಕ ಪ್ರಸಿದ್ಧಿ ಹಾಗೂ ಪೌರಾಣಿಕ ಹಿನ್ನೆಲೆ ಹೊಂದಿರುವ ಈ ಸುಕ್ಷೇತ್ರವು ಗಯಾಪದ ಕ್ಷೇತ್ರವೆಂದೂ, ದಕ್ಷಿಣ ಕಾಶಿಯೆಂದೂ, ಪ್ರಯಾಗಸದೃಶ ಮಹಿಮಾನ್ವಿತ ಸ್ಥಳವೆಂದೂ, ಮೋಕ್ಷ ಕ್ಷೇತ್ರವೆಂದೂ, ಖ್ಯಾತವಾಗಿದೆ. ಉತ್ತರದ ಕಾಶಿಯಲ್ಲಿ ವಿಶ್ವನಾಥ ಮಹಾಕಾಳಿ ಹಾಗೂ ವೀರಭದ್ರ ಇದ್ದರೆ, ದಕ್ಷಿಣದ ಕಾಶಿಯಲಿ ಸಹಸ್ರಲಿ೦ಗೇಶ್ವರ, ಮಹಾಕಾಳಿ ಹಾಗೂ ಬೈರವ ಮೂರ್ತಿಗಳು ಇರುವುದು ವೈಶಿಷ್ಟ್ಯಪೂರ್ಣ. ಗಂಗಾ-ಯಮುನೆಯರ ಸಂಗಮ ಸ್ಥಾನವಾದ ಪ್ರಯಾಗ ಉತ್ತರದಲ್ಲಿ ಪ್ರಸಿದ್ಧವಾಗಿದ್ದರೆ, ನೇತ್ರಾವತಿ-ಕುಮಾರಧಾರಾ ಸಂಗಮ ಸ್ಥಾನವಾದ ಗಯಾಪದ ಕ್ಷೇತ್ರವು ದಕ್ಷಿಣದ ಪ್ರಸಿದ್ಧ ತೀರ್ಥಕ್ಷೇತ್ರವೆಂಬುದರಲ್ಲಿ ಎಳ್ಳಷ್ಟು ಸಂಶಯವಿಲ್ಲ.